Published on: June 14, 2025

ಚುಟುಕು ಸಮಾಚಾರ : 9th and 10th ಜೂನ್ 2025

ಚುಟುಕು ಸಮಾಚಾರ : 9th and 10th ಜೂನ್ 2025

ಚೆನಾಬ್ ರೈಲು ಸೇತುವೆ ಮತ್ತು ಅಂಜಿ ಖಾಡ್ ಸೇತುವೆ

ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆನಾಬ್ ರೈಲು ಸೇತುವೆ ಮತ್ತು ಚೆನಾಬ್ ನದಿಯ ಉಪನದಿಯಾದ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯಾದ ಅಂಜಿ ಖಾಡ್ ಸೇತುವೆಯನ್ನು ಉದ್ಘಾಟಿಸಿದರು. ಎರಡೂ ಸೇತುವೆಗಳು ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಭಾಗವಾಗಿದ್ದು, ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳ ನಡುವೆ ಎಲ್ಲಾ ಹವಾಮಾನ ರೈಲು ಸಂಪರ್ಕವನ್ನು ಒದಗಿಸುತ್ತದೆ.

ಜನಗಣತಿ ಮತ್ತು ಜಾತಿಗಣತಿ

ಜನಗಣತಿ ಮತ್ತು ಜಾತಿಗಣತಿ ಎರಡನ್ನೂ 2027ರ ಮಾರ್ಚ್ 1ರಿಂದ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಎಣಿಕೆಯನ್ನು ಸೇರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಹಿಮಪಾತ ಆರಂಭವಾಗುವ ಮೊದಲೇ ಅಂದರೆ, 2026ರ ಅ.1ರಿಂದ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಗಣತಿಗಳು ಆರಂಭವಾಗಲಿವೆ. ಉಳಿದ ದೇಶದಲ್ಲಿ ಮಾರ್ಚ್ 1, 2027 ರಿಂದ ಗಣತಿ ಆರಂಭವಾಗಲಿದೆ.

ಕೋಲಾರ ಕೆರೆ ನೀರಿನ ಮೇಲೆ ಸೌರಫಲಕ

ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಸೋಮಾಂಬುಧಿ ಅಗ್ರಹಾರ ಕೆರೆ ನೀರಿನ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಲು ಸಣ್ಣ ನೀರಾವರಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಯೋಗವಾಗಿದೆ. ಈ ಯೋಜನೆಯು ಕೆರೆಯ ನೀರಿನ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.  ಕೆ.ಸಿ.ವ್ಯಾಲಿ ಯೋಜನೆ ಬಳಿಕ ಈ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿಕೊಂಡಿರುವ ಕಾರಣ ಸೌರ ಘಟಕ ಅಳವಡಿಸಲು ಆಯ್ಕೆ ಮಾಡಲಾಗಿದೆ.

ಭಾರತದ ಅಧಿಕೃತ ಕರಾವಳಿಯ ಉದ್ದ

1970ರ ದಶಕದಿಂದ 7,516.60 ಕಿಲೋಮೀಟರ್ ಎಂದು ನಂಬಿದ್ದ ಭಾರತದ ಅಧಿಕೃತ ಕರಾವಳಿಯ ಉದ್ದವನ್ನು ಈಗ ಮರು ಲೆಕ್ಕಾಚಾರ ಮಾಡಲಾಗಿದ್ದು, ಅದು ಏರಿಕೆಯಾಗಿ 11,098.81 ಕಿಲೋಮೀಟರ್ಗಳಿಗೆ ಏರಿದೆ ಎಂದು ಭಾರತೀಯ ಸಮೀಕ್ಷಾ ಸಂಸ್ಥೆ (ಸರ್ವೇ ಆಫ್ ಇಂಡಿಯಾ) ಘೋಷಿಸಿದೆ. ಈ ಹೆಚ್ಚಳವು ದೇಶದ ಭೂಭಾಗದಲ್ಲಿ ಭೌತಿಕ ಬದಲಾವಣೆಯಿಂದ ಆಗಿಲ್ಲ; ಬದಲಿಗೆ ಆಧುನಿಕ ಅಳತೆ ವಿಧಾನಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸಿದ್ದರಿಂದ ಆಗಿದೆ. ಕರಾವಳಿಯ ಸೂಕ್ಷ್ಮ ವಿವರಗಳನ್ನು ಈಗ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿ ಅಳೆಯಲಾಗಿದೆ.

ವಿಶ್ವವಿದ್ಯಾಲಯಗಳ ವಿಲೀನ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಜ್ಯದ ಇತರೆ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಯಚೂರಿನ ಕೃಷಿ ವಿವಿ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿವಿಯೊಂದಿಗೆ ಪಶು ವಿವಿಯನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ.

ವಿಲೀನ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರವು ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಸಮಿತಿ ರಚಿಸಿದೆ.

ಕ್ವಾಂಟಮ್ ಸಂಶೋಧನಾ ಉದ್ಯಾನವನ

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಯಲ್ಲಿ ಕ್ವಾಂಟಮ್ ಸಂಶೋಧನಾ ಉದ್ಯಾನವನದ ಎರಡನೇ ಹಂತಕ್ಕೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು , ತಂತ್ರಜ್ಞಾನ ಮೂಲಸೌಕರ್ಯವನ್ನು ವಿಸ್ತರಿಸಲು ₹48 ಕೋಟಿ ರೂ. ಮಂಜೂರು ಮಾಡಿದೆ. ಈ ಉಪಕ್ರಮವನ್ನು ಐಐಎಸ್‌ಸಿಯ ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯೀಕರಣ ವಿಭಾಗವಾದ ಫೌಂಡೇಶನ್ ಫಾರ್ ಸೈನ್ಸ್, ಇನ್ನೋವೇಶನ್ ಅಂಡ್ ಡೆವಲಪ್‌ಮೆಂಟ್ (ಎಫ್‌ಎಸ್‌ಐಡಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉದ್ಯಾನವನವು 55 ಸಂಶೋಧನಾ ಯೋಜನೆಗಳು ಮತ್ತು 13 ನವೋದ್ಯಮಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ, ಜೊತೆಗೆ ಕ್ವಾಂಟಮ್ ತಂತ್ರಜ್ಞಾನಗಳಲ್ಲಿ 1,000 ಭಾಗವಹಿಸುವವರಿಗೆ ತರಬೇತಿ ನೀಡುತ್ತದೆ.

ಪ್ಲಿಪ್‌ಕಾರ್ಟ್‌ಗೆ ಆರ್‌ಬಿಐನಿಂದ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ

ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆ ಪ್ಲಿಪ್‌ಕಾರ್ಟ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ದೊರೆತಿದೆ. ದೇಶದಲ್ಲಿ ದೊಡ್ಡ ಇ-ಕಾಮರ್ಸ್ ಕಂಪನಿಯೊಂದಕ್ಕೆ ಎನ್‌ಬಿಎಫ್‌ಸಿ ಪರವಾನಗಿಯು ಆರ್‌ಬಿಐ ಕಡೆಯಿಂದ ಸಿಕ್ಕಿರುವುದು ಇದೇ ಮೊದಲು. ಅಮೆರಿಕದ ವಾಲ್‌ಮಾರ್ಟ್ ಕಂಪನಿಯು ಪ್ಲಿಪ್‌ಕಾರ್ಟ್‌ನಲ್ಲಿ ಶೇಕಡ 80ರಷ್ಟು ಪಾಲು ಹೊಂದಿದೆ. ಈ ಪರವಾನಗಿ ದೊರೆತಿರುವ ಕಾರಣದಿಂದಾಗಿ ಪ್ಲಿಪ್‌ಕಾರ್ಟ್‌ಗೆ ತನ್ನ ವೇದಿಕೆಯ ಮೂಲಕ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ನೀಡಲು ಸಾಧ್ಯವಾಗಲಿದೆ. ಆದರೆ, ಠೇವಣಿ ಸ್ವೀಕರಿಸುವ ಅಧಿಕಾರ ಪ್ಲಿಪ್‌ಕಾರ್ಟ್‌ಗೆ ಇರುವುದಿಲ್ಲ. ಕಂಪನಿಯು ತನ್ನದೇ ವೇದಿಕೆ ಮತ್ತು ಯುಪಿಐ ಸೇವೆಗಳನ್ನು ಒದಗಿಸುವ ‘ಸೂಪರ್.ಮನಿ’ ಆ್ಯಪ್ ಮೂಲಕ ಗ್ರಾಹಕರಿಗೆ ಸಾಲ ನೀಡಲು ಯೋಜಿಸಿದೆ.

ಸಲಿಂಗ ಜೋಡಿ ಕುಟುಂಬ ಕಟ್ಟಿಕೊಳ್ಳಬಹುದು

ಸಲಿಂಗ ಜೋಡಿಯ ವಿವಾಹವನ್ನು ಸುಪ್ರೀಂ ಕೋರ್ಟ್ ಕಾನೂನುಬದ್ಧಗೊಳಿಸದಿದ್ದರೂ, ಅವರು ಕುಟುಂಬವೊಂದನ್ನು ಕಟ್ಟಿಕೊಳ್ಳಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರಿಗೆ ಸಲಿಂಗ ಸಂಗಾತಿ ಜತೆ ಜೀವಿಸಲು ಅವಕಾಶ ಮಾಡಿಕೊಟ್ಟಿರುವ ಹೈಕೋರ್ಟ್, ಇಬ್ಬರು ಮಹಿಳೆಯರು ಕುಟುಂಬವನ್ನು ಕಟ್ಟಬಹುದು ಎಂದಿದೆ.  ಸುಪ್ರಿಯೊ ಅಲಿಯಾಸ್‌ ಸುಪ್ರಿಯಾ ಚಕ್ರವರ್ತಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಜೋಡಿಯ ವಿವಾಹವನ್ನು ಕಾನೂನುಬದ್ಧಗೊಳಿಸದೇ ಇದ್ದರೂ ಅವರು ಕುಟುಂಬವನ್ನು ಕಟ್ಟಿಕೊಳ್ಳಬಹುದು. ಮದುವೆಯು ಕುಟುಂಬವನ್ನು ಕಟ್ಟಿಕೊಳ್ಳುವ ಏಕೈಕ ವಿಧಾನವಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.